ಕುರ್‌ಆನ್‌ ಎಂಬ ದಿವ್ಯವಾಣಿ: ಮಾನವಕುಲದ ಅಂತಿಮ ಜೀವನ ಸಂಹಿತೆ

0
Gemini_Generated_Image_po4rolpo4rolpo4r (1)

ಲೇಖಕರು: ಅಬೂ ಹುದೈಫಾ

ವಿಶ್ವವು ಕಂಡಿರುವ ಎಲ್ಲಾ ಪ್ರಶಂಸನೀಯ ಮೇರುಕೃತಿಗಳಲ್ಲಿ, ಕುರ್‌ಆನ್‌ ಎಂದು ಕರೆಯಲ್ಪಡುವ ದಿವ್ಯ ಗ್ರಂಥಕ್ಕೆ ಯಾವುದನ್ನೂ ಹೋಲಿಸಲು ಸಾಧ್ಯವಿಲ್ಲ. ಈ ಅದ್ಭುತ ಗ್ರಂಥದ ಒಂದು ಸೂಕ್ತವನ್ನು ಕೇಳಿದ ತಕ್ಷಣವೇ ಲಕ್ಷಾಂತರ ಜನರು ವಿಶ್ವಾಸವಿಟ್ಟಿದ್ದಾರೆ. ಆದರೂ ಅನೇಕರಿಗೆ ಇದರ ಬಗ್ಗೆ ಇನ್ನೂ ಏನೂ ತಿಳಿದಿಲ್ಲ. ಕುರ್‌ಆನ್‌ ಮಾನವಕುಲಕ್ಕೆ ಸೃಷ್ಟಿಕರ್ತನಿಂದ ಬಂದ ಅಂತಿಮ ದಿವ್ಯವಾಣಿಯಾಗಿದೆ. ಕ್ರಿ.ಶ. 610 ರಲ್ಲಿ ಪ್ರವಾದಿ ಮುಹಮ್ಮದ್(ಸ) ಅವರ ಮೇಲೆ ಇದು ಪ್ರಥಮವಾಗಿ ಅವತೀರ್ಣಗೊಂಡಿತು. ನಂತರ ಪ್ರವಾದಿ(ಸ) ರವರ ಜೀವನದ 23 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಪೂರ್ಣಗೊಂಡಿತು. ಈ 23 ವರ್ಷಗಳ ದಿವ್ಯವಾಣಿಯ ಸಮಾಹಾರವು 114 ಅಧ್ಯಾಯಗಳು ಮತ್ತು 6000 ಕ್ಕೂ ಹೆಚ್ಚು ಸೂಕ್ತಗಳನ್ನು ಒಳಗೊಂಡಿರುವ ಒಂದು ಗ್ರಂಥವಾಗಿ ಕುರ್‌ಆನ್‌ ಎಂಬ ನೆಲೆಯಲ್ಲಿ ನಮ್ಮ ಮುಂದಿದೆ. ಕುರ್‌ಆನ್‌ ಇಡೀ ಮಾನವಕುಲಕ್ಕೆ ಜೀವನ ಸಂಹಿತೆ ಮತ್ತು ಬದುಕಿನ ತತ್ವಗಳ ಮೂಲವಾಗಲು ಅರ್ಹವಾಗಿದೆ. ಈ ಗ್ರಂಥದ ಪ್ರಭಾವ ಎಂತಹುದೆಂದರೆ ದೇವನು ಹೀಗೆ ಹೇಳುತ್ತಾನೆ: “ನಾವು ಈ ಕುರ್‍ಆನನ್ನು ಒಂದು ಪರ್ವತದ ಮೇಲೆ ಇಳಿಸಿ ಬಿಡುತ್ತಿದ್ದರೆ, ಅದು ದೇವನ ಭಯದಿಂದ ಮುದುಡಿ ನುಚ್ಚು ನೂರಾಗುವುದನ್ನು ನೀವು ಕಾಣುತ್ತಿದ್ದಿರಿ. ಜನರು (ತಮ್ಮ ಅವಸ್ಥೆಯ ಕುರಿತು) ಚಿಂತಿಸಲೆಂದು ನಾವು ಅವರ ಮುಂದೆ ಈ ಉಪಮೆಗಳನ್ನು ವಿವರಿಸುತ್ತೇವೆ.”  (59:21)

ನಿಜವಾಗಿಯೂ ಜನರು ಈ ಗ್ರಂಥದ ಬಗ್ಗೆ ಯೋಚಿಸಿದರೆ, ಈ ಜಗತ್ತಿನಲ್ಲಿ ಯಾವುದೂ ಇದಕ್ಕೆ ಸಮನಾಗಿಲ್ಲ ಎಂಬುದನ್ನು ಅರಿತುಕೊಳ್ಳುತ್ತಾರೆ. ಈಗ ಕಾಡಬಹುದಾದ ಪ್ರಶ್ನೆ ಏನಂದರೆ, ಈ ವಾದವನ್ನು ಏಕೆ ಒಪ್ಪಿಕೊಳ್ಳಬೇಕು? ಇತರ ಗ್ರಂಥಗಳಿಗಿಂತ ಕುರ್‌ಆನ್‌ಗೆ ಏಕೆ ಆದ್ಯತೆ ನೀಡಬೇಕು? ಈ ಗ್ರಂಥವು ಇಡೀ ಮಾನವಕುಲದ ಗಮನಕ್ಕೆ ಏಕೆ ಅರ್ಹವಾಗಿದೆ? ಈ ಕೆಳಗಿನ ಕಾರಣಗಳು ಗಮನಾರ್ಹವಾಗಿದೆ.

ಸಂರಕ್ಷಣೆ

ಇಸ್ಲಾಮಿನ ಪ್ರಸಿದ್ಧ ಇಂಗ್ಲಿಷ್ ವಿಮರ್ಶಕ ಸರ್ ವಿಲಿಯಂ ಮುಯಿರ್ ರವರು, “ಇಷ್ಟು ಶುದ್ಧವಾದ ಪಠ್ಯದೊಂದಿಗೆ ಹನ್ನೆರಡು ಶತಮಾನಗಳ ಕಾಲ ಉಳಿದುಕೊಂಡಿರುವ ಮತ್ತೊಂದು ಪುಸ್ತಕ ಪ್ರಾಯಶಃ ಜಗತ್ತಿನಲ್ಲಿ ಇಲ್ಲ” ಎಂದು 200 ವರ್ಷಗಳ ಹಿಂದೆ ಬರೆದಿದ್ದಾರೆ. ಆದರೆ ಮುಸ್ಲಿಮರಿಗೆ, ಇದನ್ನು ಹೇಳಲು ವಿಲಿಯಂ ಮುಯಿರ್ ಅವರ ಅಗತ್ಯವಿಲ್ಲ. 1400 ವರ್ಷಗಳ ಹಿಂದೆ ದೇವನು ಹೀಗೆ ಬಹಿರಂಗಪಡಿಸಿದಾಗ ಮುಸ್ಲಿಮರು ಈ ವಾಸ್ತವವನ್ನು ಒಪ್ಪಿಕೊಂಡರು: “ಈ ‘ಉಪದೇಶ’ವನ್ನು ನಿಶ್ಚಯವಾಗಿಯೂ ನಾವು ಅವತೀರ್ಣ ಗೊಳಿಸಿರುತ್ತೇವೆ ಮತ್ತು ಸ್ವತಃ ನಾವೇ ಅದರ ರಕ್ಷಕರೂ ಆಗಿರುತ್ತೇವೆ.” (15:9)

ಈ ಮಾತುಗಳು ಇಂದಿನವರೆಗೂ ನಿಜವೆಂದು ಸಾಬೀತಾಗಿವೆ. ಮುಹಮ್ಮದ್ (ಸ) ಅವರಿಗೆ ಮೊದಲ ಸೂಕ್ತ ಬಹಿರಂಗಗೊಂಡ ಕ್ಷಣದಿಂದ ಇಂದಿನವರೆಗೂ, ಕುರ್‌ಆನಿನ ಪ್ರತಿಯೊಂದು ಅಕ್ಷರ ಮತ್ತು ಪದವು ಬದಲಾಗದೆ ಸಂರಕ್ಷಿಸಲ್ಪಟ್ಟಿದೆ. ಕುರ್‌ಆನ್‌ಗಿಂತ ಮುಂಚೆ ಕಳುಹಿಸಲಾದ ಯಾವುದೇ ದಿವ್ಯವಾಣಿಗಳಿಗೆ ಈ ದೈವಿಕ ಭರವಸೆಯನ್ನು ನೀಡಲಾಗಿರಲಿಲ್ಲ. ಇದೇ ಕಾರಣಕ್ಕಾಗಿ ಇತರ ಧರ್ಮಗ್ರಂಥಗಳು ಭ್ರಷ್ಟತೆ ಮತ್ತು ತಪ್ಪುಗಳ ಸುಳಿಗೆ ಸಿಳುಕಿರುವುದು ಕಾಣಬಹುದು. ಪ್ರವೃತ್ತಿಗಳು ಮತ್ತು ಆಸೆಗಳಿಗೆ ತಕ್ಕಂತೆ ವಾರ್ಷಿಕವಾಗಿ ವಿಭಿನ್ನ ಆವೃತ್ತಿಗಳನ್ನು ತಯಾರಿಸುವ ಮಟ್ಟಿಗೆ ಮನುಷ್ಯನು ಇತರ ಗ್ರಂಥಗಳ ಮೇಲೆ ಪ್ರಭಾವ ಬೀರಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿರುವ ವಾಸ್ತವವಾಗಿದೆ. ಕುರ್‌ಆನಿನ ಹೊರತಾದ ಗ್ರಂಥಗಳಲ್ಲಿ ಹಸ್ತಕ್ಷೇಪವು ಎಷ್ಟು ದೀರ್ಘಕಾಲದಿಂದ ನಡೆಯುತ್ತಿದೆ ಎಂದರೆ, ಸೃಷ್ಟಿಕರ್ತನ ಪದಗಳಲ್ಲಿ ಯಾವುದಾದರೂ ನಿಜವಾಗೂ ಉಳಿದಿದೆಯೇ ಎಂದು ತಿಳಿಯುವುದು ಕೂಡ ಈಗ ಅಸಾಧ್ಯವಾಗಿದೆ!

ಕುರ್‌ಆನಿನ ವಿಷಯದಲ್ಲಿ ಇದು ತದ್ವಿರುದ್ಧವಾಗಿದೆ. ಈ ಅದ್ಭುತ ಗ್ರಂಥದ ವಿಷಯಗಳು ವಿಶ್ವಾದ್ಯಂತ ಲಕ್ಷಾಂತರ ಮುಸ್ಲಿಮರ ಹೃದಯಗಳಲ್ಲಿ ಸಂಗ್ರಹವಾಗಿವೆ. 12 ವರ್ಷದ ಸಣ್ಣ ಮಕ್ಕಳು ಸಹ ಇಡೀ ಗ್ರಂಥವನ್ನು ಅದರ ಮೂಲ ಭಾಷೆಯಾದ ಅರೇಬಿಕ್‌ನಲ್ಲಿ ಕಂಠಪಾಠ ಮಾಡುತ್ತಾರೆ. ಭೂಮಿಯ ಮೇಲೆ ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿಂದ, ಇಷ್ಟು ಸುದೀರ್ಘ ಅವಧಿಯಲ್ಲಿ, ಎಲ್ಲೂ ಯಾವುದೇ ಬದಲಾವಣೆಗಳಿಗೆ ಒಳಗಾಗದೆ, ಅದರ ಮೂಲ ಭಾಷೆಯಲ್ಲೇ ಮೌಖಿಕವಾಗಿ ಸಂರಕ್ಷಿಸಲ್ಪಟ್ಟಿರುವ ಮತ್ತೊಂದು ಧಾರ್ಮಿಕ ಗ್ರಂಥವಿಲ್ಲ. ಮುಸ್ಲಿಮರಾಗಿ ನಾವು ಕುರ್‌ಆನನ್ನು ಅದು ಬಹಿರಂಗಗೊಂಡ ಭಾಷೆಯಲ್ಲಿ, ಅಂದರೆ ಅರೇಬಿಕ್‌ನಲ್ಲಿ ಮಾತ್ರ ಇರಲು ಸಾಧ್ಯ ಎಂದು ನಂಬುತ್ತೇವೆ. ಉಳಿದದ್ದೆಲ್ಲವೂ ಅನುವಾದವೇ ಹೊರತು ಸೃಷ್ಟಿಕರ್ತನ ದೈವಿಕ ಪದಗಳಲ್ಲ. ಈ ದೈವಿಕ ಸಂರಕ್ಷಣೆಯ ನಿಜವಾದ ಪರೀಕ್ಷೆಯೆಂದರೆ, ಅಸ್ತಿತ್ವದಲ್ಲಿರುವ ಎಲ್ಲಾ ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಸುಟ್ಟುಹಾಕಿ, ಯಾವುದು ಮೊದಲಿನಂತೆ ಮರಳಿ ಬರಬಲ್ಲದು ಎಂದು ನೋಡುವುದಾಗಿದೆ. ಕುರ್‌ಆನ್‌ ಮಾತ್ರ ಅಕ್ಷರಕ್ಕೆ ಅಕ್ಷರ, ಪದಕ್ಕೆ ಪದವಾಗಿ ಅದರ ಮೂಲ ರೂಪದಲ್ಲಿ ಮರಳಿ ಬರಬಲ್ಲ ಏಕೈಕ ಪುಸ್ತಕವಾಗಿರುತ್ತದೆ.

ಕುರ್‌ಆನ್‌ ಸಂರಕ್ಷಿಸಲ್ಪಟ್ಟಿದೆ ಎಂಬ ವಾದವನ್ನು ಹಸ್ತಪ್ರತಿಗಳ ಪುರಾವೆಗಳ ಮೂಲಕ ಸಾಬೀತು ಮಾಡಬೇಕೆಂದು ಕೆಲವರು ಹೇಳುತ್ತಾರೆ. ನಮಗೆ ಇದು ಅಗತ್ಯವಾದ ಮಾನದಂಡವಲ್ಲ. ಆದರೆ, ಅನುಮಾನಗಳನ್ನು ಹೋಗಲಾಡಿಸಲು ಮುಸ್ಲಿಮರ ಬಳಿ ಸಾಕಷ್ಟು ಪುರಾವೆಗಳಿವೆ. ಪ್ರವಾದಿಯವರ ಮರಣದ 20 ವರ್ಷಗಳ ನಂತರ, ಮೂರನೇ ಖಲೀಫಾ ಉಸ್ಮಾನ್ ಅವರ ಕಾಲಕ್ಕೆ ಸೇರಿದ ಕುರ್‌ಆನಿನ ಎರಡು ಪ್ರತಿಗಳು ಅಸ್ತಿತ್ವದಲ್ಲಿವೆ. ಈ ಎರಡು ಪ್ರತಿಗಳು ಟರ್ಕಿಯ ಇಸ್ತಾಂಬುಲ್‌ನ ಟೋಪ್ಕಾಪಿ ಮ್ಯೂಸಿಯಂನಲ್ಲಿ ಮತ್ತು ಉಝ್ಬೇಕಿಸ್ತಾನ್‌ನ ತಾಷ್ಕೆಂಟ್‌ ನಲ್ಲಿ ಕಂಡುಬರುತ್ತವೆ. ತಾಷ್ಕೆಂಟ್ ಪ್ರತಿಯು ಖಲೀಫರ ವೈಯಕ್ತಿಕ ಪ್ರತಿಯಾಗಿದ್ದಿರಬಹುದು ಎಂದು ಭಾವಿಸಲಾಗಿದೆ. ಏಕೆಂದರೆ, ಅವರು ಅದನ್ನು ಓದುತ್ತಿದ್ದಾಗ ಕೊಲೆಯಾದಾಗ ಚೆಲ್ಲಿದ ಅವರ ರಕ್ತದ ಕಲೆಗಳು ಅದರಲ್ಲಿ ಇಂದಿಗೂ ಇವೆ. ಇಂದು ನಮ್ಮ ಬಳಿ ಇರುವ ಕುರ್‌ಆನ್‌ ಗ್ರಂಥಕ್ಕೂ ಮತ್ತು 1400 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದದ್ದಕ್ಕೂ ಒಂದೇ ಒಂದು ವ್ಯತ್ಯಾಸವಿಲ್ಲ ಎಂಬುದನ್ನು ಈ ಪ್ರತಿ ತೋರಿಸುತ್ತದೆ. ಹೀಗಾಗಿ ಅಲ್ಲಾಹನ ಭರವಸೆ ನಿಜವಾಗಿದೆ.

ತಪ್ಪುಗಳಿಲ್ಲದ ಗ್ರಂಥ

ಮನುಷ್ಯನು ಜೀವಿಯಾಗಿ ತಪ್ಪುಗಳನ್ನು ಮಾಡಬಲ್ಲವನಾಗಿದ್ದಾನೆ. ಈ ಕಾರಣಕ್ಕಾಗಿ ಅವನಿಂದ ತಯಾರಿಸಲ್ಪಟ್ಟ ಯಾವುದೇ ವಿಷಯದಲ್ಲಿ ಸ್ವಾಭಾವಿಕವಾಗಿ ದೋಷಗಳಿರುತ್ತವೆ. ಕುರ್‌ಆನಿನ ವಿಷಯದಲ್ಲಿ ಅಂತಹ ಆಲೋಚನೆಯನ್ನು ಪರಿಗಣಿಸಲು ಕೂಡ ಸಾಧ್ಯವಿಲ್ಲ. ಏಕೆಂದರೆ, ಇದು ದೋಷರಹಿತನಾದವನಿಂದ ಬಂದದ್ದಾಗಿದೆ. ವಾಸ್ತವವಾಗಿ, ದೇವನು ಈ ವಿಷಯವನ್ನು ಸುಂದರವಾಗಿ ಸ್ಪಷ್ಟಪಡಿಸುತ್ತಾ ಹೀಗೆ ಹೇಳುತ್ತಾನೆ: “ಇವರೇನು ಕುರ್‌ಆನಿನ ಬಗ್ಗೆ ಚಿಂತನೆ ನಡೆಸುವುದಿಲ್ಲವೇ? ಇದು ದೇವನ ಹೊರತು ಇನ್ನಾರ ಕಡೆಯಿಂದಾದರೂ ಆಗಿರುತ್ತಿದ್ದರೆ ಇದರಲ್ಲಿ ಅನೇಕ ವಿರೋಧಾಭಾಸಗಳು ಕಂಡು ಬರುತ್ತಿದ್ದುವು.” (4:82)

ಇತಿಹಾಸದುದ್ದಕ್ಕೂ, ಅನೇಕರು ಕುರ್‌ಆನನ್ನು ಪರಿಶೀಲಿಸಲು ಮತ್ತು ಅದರಲ್ಲಿ ತಪ್ಪು ಹಾಗೂ ದೋಷಗಳನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಇಂದಿನವರೆಗೂ, ಈ ಗ್ರಂಥವು ದೇವನಿಂದ ಬಂದದ್ದಲ್ಲ ಎಂಬುದನ್ನು ತೋರಿಸುವ ಯಾವುದೇ ಒಂದು ಪುರಾವೆಯನ್ನು ತರಲು ಯಾರಿಗೂ ಸಾಧ್ಯವಾಗಿಲ್ಲ. ಕೆಲವು ಜನರು ಇದನ್ನು ಸೈತಾನನ ಕೆಲಸ ಎಂದೂ ಕರೆದಿದ್ದಾರೆ. ಏಕೆಂದರೆ, ಅವರು ಅದನ್ನು ಓದಿದಾಗ ಈ ಗ್ರಂಥವು ಅವರ ಮೇಲೆ ಅಷ್ಟೊಂದು ಪ್ರಭಾವ ಬೀರಿತ್ತು! ಮಾನವ ಹಸ್ತಕ್ಷೇಪದ ಗ್ರಂಥಗಳಲ್ಲಿ, ವೈರುಧ್ಯಗಳು, ತಪ್ಪುಗಳು ಮತ್ತು ಅಸಂಬದ್ಧತೆಗಳು ನಿರಂತರವಾಗಿ ಇರುತ್ತವೆ. ಜನರು ಈ ಅಸ್ಪಷ್ಟತೆಗಳನ್ನು ಕುರ್‌ಆನಿನೊಂದಿಗೆ ಹೋಲಿಸಿದಾಗ, ಅದು ಹೆಚ್ಚಾಗಿ ಈ ದೋಷರಹಿತ ಗ್ರಂಥದ ಸ್ವೀಕಾರಕ್ಕೆ ಕಾರಣವಾಗುತ್ತದೆ.

ಅರೇಬಿಕ್ ಭಾಷೆ

ಕುರ್‌ಆನ್‌ ಪಠಣವನ್ನು ಕೇಳಿದಾಗ, ನೀವು ತಲ್ಲಣಗೊಳ್ಳಬಹುದು. ಸೂಕ್ತಗಳು ಪಠಿಸುವವರ ಜೊತೆಗೆ, ಆಲಿಸುವ ಜನರು ತೀವ್ರವಾಗಿ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ನೀವು ನಮಾಝ್‌ನ ಸಮಯದಲ್ಲಿ ಕಾಣಬಹುದು. ಹಾಗಾದರೆ, ಈ ಜನರನ್ನು ಇಷ್ಟೊಂದು ಅಳುವಂತೆ ಮಾಡುವುದು ಯಾವುದು? ಈ ಗ್ರಂಥದ ಸೌಂದರ್ಯ ಮತ್ತು ವಾಕ್ಚಾತುರ್ಯವೇ ಲಕ್ಷಾಂತರ ಜನರನ್ನು ಕಣ್ಣೀರು ಹಾಕುವಂತೆ ಮಾಡುತ್ತದೆ. ಈ ಸೌಂದರ್ಯವು ಅರೇಬಿಕ್ ಭಾಷೆಯಲ್ಲಿ ವ್ಯಕ್ತವಾಗಿದೆ. ದೇವನು ಹೇಳುತ್ತಾನೆ: “ಇದನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುವಂತೆ ನಾವು ಇದನ್ನು ಕುರ್‍ಆನನ್ನಾಗಿ ಮಾಡಿ ಅರಬೀ ಭಾಷೆಯಲ್ಲಿ ಅವತೀರ್ಣಗೊಳಿಸಿದೆವು.” (12:2)

ಪ್ರವಾದಿಯವರ (ಸ) ಕಾಲದಲ್ಲಿ ಮೂರು ರೀತಿಯ ಅಭಿವ್ಯಕ್ತಿ ವಿಧಾನಗಳನ್ನು ಬಳಸಲಾಗುತ್ತಿತ್ತು. ಸಾಮಾನ್ಯ ಮಾತು, ಭವಿಷ್ಯ ಹೇಳುವವರ ಮಾತು ಮತ್ತು ಕಾವ್ಯ. ಅರಬರು ತಮ್ಮ ಭಾಷೆಯ ಪ್ರವೀಣರಾಗಿದ್ದರು ಮತ್ತು ಕಾವ್ಯವು ಅವರ ಸಾಂಸ್ಕೃತಿಕ ಹೆಮ್ಮೆಯಾಗಿತ್ತು. ಅರೇಬಿಕ್ ಕಾವ್ಯವನ್ನು 16 ವರ್ಗಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದೂ ಮತ್ತೊಂದಕ್ಕಿಂತ ಭಿನ್ನವಾಗಿದೆ. ಅರಬರ ಮುಂದೆ ಕುರ್‌ಆನ್‌ ಅನ್ನು ಘೋಷಿಸಿದಾಗ, ಅದು ಅವರನ್ನು ಮಿತಿಮೀರಿ ವಿಸ್ಮಯಗೊಳಿಸಿತು. ಈ ಹಿಂದೆ ಎಂದೂ ಕೇಳದಂತಿತ್ತು. ಕಾವ್ಯದ 16 ವರ್ಗಗಳಿಗೆ ಹೊಂದಿಕೆಯಾಗಲಿಲ್ಲ, ಭವಿಷ್ಯ ಹೇಳುವವನ ಮಾತೂ ಆಗಿರಲಿಲ್ಲ ಮತ್ತು ಅದು ಖಂಡಿತವಾಗಿಯೂ ಸಾಮಾನ್ಯ ಮಾತಂತೂ ಆಗಿರಲೇ ಇಲ್ಲ. ಅದು ಇವೆಲ್ಲವೂ ಆಗಿಲ್ಲದಿದ್ದರೆ, ಅದು ದೇವನ ವಾಕ್ಯ ಮಾತ್ರವೇ ಆಗಿರಲು ಸಾಧ್ಯವಿತ್ತು.

ಕುರ್‌ಆನಿನ ಆರಂಭಿಕ ಅಧ್ಯಾಯಗಳ ಶೈಲಿ ಮತ್ತು ಗಾಂಭೀರ್ಯವು ಅನೇಕರನ್ನು ಕಣ್ಣೀರು ಹಾಕುವಂತೆ ಮಾಡಿತು. ಕುರ್‌ಆನಿನ ಸುಂದರವಾದ ಅರಬಿ ಭಾಷೆ ಮಧ್ಯಪ್ರಾಚ್ಯದ ಲಕ್ಷಾಂತರ ಅರಬರ ಮನಪರಿವರ್ತಿಸಿತು. ಕುರ್‌ಆನ್‌ ಈ ಅರಬರ ಜೀವನದ ಮೇಲೆ ಪ್ರಭಾವ ಬೀರಿದ್ದಷ್ಟೇ ಅಲ್ಲದೆ, ಅವರ ಸಂಸ್ಕೃತಿಯನ್ನೂ ಬದಲಾಯಿಸಿತು. ಇಂದು ಕೂಡ, ಈ ಗ್ರಂಥದ ಉಲ್ಲೇಖವಿಲ್ಲದೆ ಅರೇಬಿಕ್ ಭಾಷೆಯ ಯಾವುದೇ ಗಂಭೀರ ಅಧ್ಯಯನ ಸಾಧ್ಯವಿಲ್ಲ.

ಪ್ರವಾದಿ(ಸ) ರವರ ಕಾಲದ ಕೆಲವು ವಿರೋಧಿಗಳು ಮುಹಮ್ಮದ್ (ಸ) ಅವರನ್ನು ಜ್ಯೋತಿಷಿ ಮತ್ತು ಹುಚ್ಚ ಎಂದು ಆರೋಪಿಸಿದರು. ವಿರೋಧಿಗಳನ್ನು ಸುಮ್ಮನಾಗಿಸಲು ದೇವನು ಒಂದು ಸವಾಲನ್ನು ಹಾಕಿದನು. ಕುರ್‌ಆನಿನಂತಹ ಒಂದು ಗ್ರಂಥವನ್ನು ತರಲು ಅವರಿಗೆ ಕೇಳಿದನು. ಅದನ್ನು ಮಾಡಲು ಸಾಧ್ಯವಾಗದಿದ್ದಾಗ, ಕುರ್‌ಆನಿನಂತಹ ಹತ್ತು ಅಧ್ಯಾಯಗಳನ್ನು ತರಲು ಹೇಳಿದನು. ಅದೂ ಸಾಧ್ಯವಾಗದಿದ್ದಾಗ, ಅಂತಿಮವಾಗಿ ಹೀಗೆ ಹೇಳಿದನು: “ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದ ಈ ಗ್ರಂಥವು ನಮ್ಮದೋ ಅಲ್ಲವೋ ಎಂಬ ವಿಷಯದಲ್ಲಿ ನಿಮಗೆ ಸಂದೇಹವಿದ್ದರೆ ಇದಕ್ಕೆ ಸರಿಸಮಾನವಾದ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ. ದೇವನ ಹೊರತು ನಿಮ್ಮೆಲ್ಲ ಸಾಕ್ಷಿಗಳನ್ನೂ ನಿಮ್ಮ ಸಹಾಯಕ್ಕಾಗಿ ಕರೆದು ತನ್ನಿರಿ. ನೀವು ಸತ್ಯವಾದಿಗಳಾಗಿದ್ದರೆ ಈ ಕಾರ್ಯವನ್ನು ಮಾಡಿ ತೋರಿಸಿರಿ. (2:23)

ಕುರ್‌ಆನಿನಲ್ಲಿನ ಅತ್ಯಂತ ಸಣ್ಣ ಅಧ್ಯಾಯ(ಅಧ್ಯಾಯ 108)ವು ಕೇವಲ 3 ಸೂಕ್ತಗಳನ್ನಷ್ಟೇ ಹೊಂದಿದೆ. ಪ್ರವಾದಿಯವರ(ಸ) ಕಾಲದ ವಿರೋಧಿಗಳಿಗೆ ಇಷ್ಟು ಸಣ್ಣದಾದ ವಿಷಯವನ್ನು ಸಹ ತರಲು ಸಾಧ್ಯವಾಗಲಿಲ್ಲ ಮತ್ತು ಅಂದಿನಿಂದ ಇಂದಿನವರೆಗೆ ಯಾರೂ ಈ ಅಸಾಧ್ಯ ಕೆಲಸವನ್ನು ಮಾಡಿಲ್ಲ. ಇನ್ನು ಕುರ್‌ಆನ್‌ ಪ್ರವಾದಿ ಮುಹಮ್ಮದ್ (ಸ) ರವರು ರಚಿಸಿರುವ ಗ್ರಂಥ ಎಂದು ಹೇಳುವವರ ವಾದವನ್ನು, ಪ್ರವಾದಿಗೆ ಓದಲು ಅಥವಾ ಬರೆಯಲು ತಿಳಿದಿರಲಿಲ್ಲ ಎಂಬ ವಾಸ್ತವವು ಸುಳ್ಳಾಗಿಸುತ್ತದೆ.

ವಿಜ್ಞಾನ

ಕಳೆದ ಕೆಲವು ದಶಕಗಳಲ್ಲಿ, ಕುರ್‌ಆನಿನಲ್ಲಿರುವ ವೈಜ್ಞಾನಿಕ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಶೋಧಿಸಲ್ಪಟ್ಟ ವೈಜ್ಞಾನಿಕ ದತ್ತಾಂಶಗಳು 1400 ವರ್ಷಗಳಿಂದ ಈ ಗ್ರಂಥದಲ್ಲಿ ಅಸ್ತಿತ್ವದಲ್ಲಿವೆ. ವಾಸ್ತವವಾಗಿ, ಈ ಬ್ರಹ್ಮಾಂಡದ ಸಾಮಾನ್ಯ ಮೂಲವನ್ನು ಅತ್ಯುನ್ನತನಾದ ದೇವನು ಸ್ಪಷ್ಟವಾಗಿ ಹೇಳಿದ್ದಾನೆ: (ಪ್ರವಾದಿಯ ಮಾತನ್ನು ಪಾಲಿಸಲು) ನಿರಾಕರಿಸಿದವರು, ಆಕಾಶಗಳೂ ಭೂಮಿಯೂ ಕೂಡಿ ಕೊಂಡಿದ್ದು ಅನಂತರ ನಾವು ಅವುಗಳನ್ನು ಬೇರ್ಪಡಿಸಿದ್ದನ್ನೂ ಪ್ರತಿಯೊಂದು ಜೀವಿಯನ್ನೂ ನೀರಿನಿಂದ ಸೃಷ್ಟಿಸಿದ್ದನ್ನೂ ಕಾಣಲಿಲ್ಲವೇ? ಅವರು (ನಮ್ಮ ಸೃಷ್ಟಿಕರ್ತೃತ್ವದ ಮೇಲೆ) ವಿಶ್ವಾಸವಿರಿಸುವುದಿಲ್ಲವೇ? (21:30)

ಆಕಾಶಗಳು ಮತ್ತು ಭೂಮಿಯ ಈ ಬೇರ್ಪಡಿಕೆಯನ್ನು ವಿಜ್ಞಾನಿಗಳು ಸಾಮಾನ್ಯವಾಗಿ ‘ಬಿಗ್ ಬ್ಯಾಂಗ್’ (ಮಹಾಸ್ಫೋಟ) ಎಂದು ಕರೆಯುತ್ತಾರೆ. ಜೀವವು ನೀರಿನಿಂದ ಹುಟ್ಟಿಕೊಂಡಿದೆ ಮತ್ತು ಪ್ರತಿಯೊಂದು ಜೀವಕೋಶವು 85% ನೀರಿನಿಂದ ಕೂಡಿದೆ ಎಂಬುದು ಸಹ ಒಂದು ಸತ್ಯವಾಗಿದೆ. ನೀರಿಲ್ಲದೆ ಜೀವನ ಅಸಾಧ್ಯ.

ಭೂಮಿಯ ಪರ್ವತಗಳು, ಐಸ್‌ಬರ್ಗ್‌ಗಳಂತೆ (ಹಿಮಗಡ್ಡೆಗಳು) ಭೂಮಿಯ ಆಳಕ್ಕೆ ಹೋಗುವ ಬೇರುಗಳನ್ನು ಹೊಂದಿವೆ. ಇದು ಅವುಗಳ ವಿಪರೀತ ಎತ್ತರದಲ್ಲೂ ಅವು ಉರುಳಿ ಬೀಳದಂತೆ ನೋಡಿಕೊಳ್ಳುತ್ತದೆ – ಇದನ್ನು ‘ಐಸೊಸ್ಟಾಸಿ’ ಎಂದು ಕರೆಯಲಾಗುತ್ತದೆ. ಈ ರೀತಿಯಾಗಿ, ಪರ್ವತಗಳು ಗೂಟಗಳಂತಿವೆ. ಆದರೆ, ದೇವನಿಂದಾಗಿ ಈ ಸತ್ಯವು ನಮಗೆ ಈಗಾಗಲೇ ತಿಳಿದಿದೆ: “ಇವು ವಾಸ್ತವಿಕತೆಯಲ್ಲವೆ, ನಾವು ಭೂಮಿಯನ್ನು ಹಾಸನ್ನಾಗಿ ಮಾಡಿರುವುದು- ಪರ್ವತಗಳನ್ನು ಮೊಳೆಗಳಂತೆ ನಾಟಿ ಬಿಟ್ಟಿರುವುದು.” (78: 6-7) “ಭೂಮಿಯು ನಿಮ್ಮ ಸಹಿತ ಉರುಳಿ ಬಿಡದಂತೆ ಅವನು ಅದರಲ್ಲಿ ಪರ್ವತಗಳನ್ನು ನಾಟಿದನು.” (31:10)

ಕುರ್‌ಆನಿನಲ್ಲಿ ಕಂಡುಬರುವ ಭ್ರೂಣಶಾಸ್ತ್ರದ ವಿವರಗಳು ಆಶ್ಚರ್ಯಕರವಾಗಿವೆ. ವೀರ್ಯಾಣು ಅಂಡಾಣುವನ್ನು ತಲುಪಿದ ಕ್ಷಣದಿಂದ ಹಿಡಿದು ಅದು ಮಾನವನಾಗಿ ರೂಪುಗೊಳ್ಳುವವರೆಗೆ ಗರ್ಭದೊಳಗೆ ಮಗುವಿನ ರಚನೆಯನ್ನು ಅಲ್ಲಾಹನು ವಿವರಿಸುತ್ತಾನೆ. ಆಧುನಿಕ ಲೋಕವು ಇತ್ತೀಚೆಗಷ್ಟೇ ಪತ್ತೆ ಮಾಡಿರುವ ಈ ದತ್ತಾಂಶವು ಅನೇಕ ಪಾಶ್ಚಿಮಾತ್ಯ ವಿಜ್ಞಾನಿಗಳನ್ನು ವಿಸ್ಮಯಗೊಳಿಸಿದೆ. ಅವರಲ್ಲಿ ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದ ಡಾ. ಕೀತ್ ಮೂರ್ ಒಬ್ಬರು. ಡಾ. ಮೂರ್ ಅವರು ಭ್ರೂಣಶಾಸ್ತ್ರದ ವಲಯಗಳಲ್ಲಿ ಮಾನ್ಯತೆ ಪಡೆದ ತಜ್ಞರಾಗಿದ್ದಾರೆ. ಅವರು ರಚಿಸಿರುವ ಪುಸ್ತಕವನ್ನು ಪ್ರಪಂಚದಾದ್ಯಂತದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಪ್ರಮಾಣಿತ ಪಠ್ಯವಾಗಿ ನಿಗದಿಪಡಿಸಲಾಗಿದೆ. ಕುರ್‌ಆನಿನಲ್ಲಿರುವ ಈ ಮಾಹಿತಿಯನ್ನು ಹೇಗೆ ವಿವರಿಸಬಹುದು ಎಂದು ಡಾ. ಮೂರ್ ಅವರನ್ನು ಕೇಳಿದಾಗ, ಅವರು ಹೀಗೆ ಉತ್ತರಿಸಿದರು: “ಇದು ದೈವಿಕವಾಗಿ ಮಾತ್ರ ಬಹಿರಂಗಗೊಳ್ಳಲು ಸಾಧ್ಯ”.

ಇತಿಹಾಸ

ಕುರ್‌ಆನ್‌ ಐತಿಹಾಸಿಕ ನಿಖರತೆಯ ಗ್ರಂಥವಾಗಿದೆ. ಅನೇಕ ಧಾರ್ಮಿಕ ವ್ಯಕ್ತಿಗಳು ಮತ್ತು ಇತಿಹಾಸಕಾರರ ತಪ್ಪುಗಳನ್ನು ತಿದ್ದಿದೆ. ಒಂದು ನಿಖರತೆಯೆಂದರೆ, ಮೋಸೆಸ್‌ (ಮೂಸಾ) ಅವರನ್ನು ಬೆನ್ನಟ್ಟುವಾಗ ಕೆಂಪು ಸಮುದ್ರದಲ್ಲಿ ಮುಳುಗಿ ಸತ್ತ ಫೇರೋನ (ಫಿರ್‌ಔನ್) ಭವಿಷ್ಯ. ಫಿರ್‌ಔನನು ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದಾಗ ದೇವನ ಮೇಲಿನ ತನ್ನ ವಿಶ್ವಾಸವನ್ನು ಘೋಷಿಸುತ್ತಾನೆ. ಆದರೆ, ಅದು ತುಂಬಾ ತಡವಾಗಿತ್ತು. ದೇವನು ಹೀಗೆ ಭರವಸೆ ನೀಡುತ್ತಾನೆ: “ನಿಶ್ಚಯವಾಗಿಯೂ ನಮ್ಮ ನಿದರ್ಶನಗಳ ಬಗ್ಗೆ ಅಲಕ್ಷ್ಯರಾಗಿರುವವರು ಬಹುಸಂಖ್ಯೆಯಲ್ಲಿದ್ದರೂ ನೀನು ಮುಂದಿನ ತಲೆಮಾರುಗಳಿಗೆ ಎಚ್ಚರಿಕೆಯ ದ್ಯೋತಕವಾಗಿರುವಂತೆ ನಾವಿನ್ನು ನಿನ್ನ ಶವವನ್ನು ಮಾತ್ರ ಸುರಕ್ಷಿತವಾಗಿರಿಸುವೆವು” (10:92)

1898 ರಲ್ಲಿ ಈಜಿಪ್ಟ್‌ನ ಅರಸರ ಕಣಿವೆಯಲ್ಲಿ (ವ್ಯಾಲಿ ಆಫ್ ದಿ ಕಿಂಗ್ಸ್) ವಿವಿಧ ಫೇರೋಗಳ ಸಮಾಧಿಗಳು ಪತ್ತೆಯಾದವು. 1975 ರಲ್ಲಿ ಪ್ರಖ್ಯಾತ ಫ್ರೆಂಚ್ ಶಸ್ತ್ರಚಿಕಿತ್ಸಕ ಡಾ. ಮಾರಿಸ್ ಬುಖೈಲ್ ಅವರಿಗೆ ರಾಮೆಸೆಸ್ II ಮತ್ತು ಮೋಸೆಸ್‌ರನ್ನು ಬೆನ್ನಟ್ಟಿದ್ದ ಫೇರೋವ – ಮೆರ್ನೆಪ್ತಾಹ್ ಅವರ ರಕ್ಷಿಸಲ್ಪಟ್ಟ ಶವಗಳನ್ನು (ಮಮ್ಮಿಗಳನ್ನು) ಪರೀಕ್ಷಿಸಲು ಅನುಮತಿಸಲಾಯಿತು. ಮೆರ್ನೆಪ್ತಾಹ್ ತನ್ನ ದೇಹದ ಹಲವಾರು ಭಾಗಗಳಿಗೆ ತೀವ್ರವಾದ ಪೆಟ್ಟುಗಳನ್ನು ತಿಂದಿದ್ದನು ಮತ್ತು ಭಾರಿ ಹೃದಯಾಘಾತಕ್ಕೆ ಒಳಗಾಗಿದ್ದನು ಎಂಬುದನ್ನು ಡಾ. ಬುಖೈಲ್ ಪತ್ತೆಹಚ್ಚಿದರು. ಆಶ್ಚರ್ಯಕರವಾಗಿ, ಯಾರಾದರೂ ಮುಳುಗಿ ಸತ್ತಾಗ ಇಂತಹದ್ದೇ ಫಲಿತಾಂಶಗಳು ಉಂಟಾಗುತ್ತವೆ! ಹೀಗೆ ಅಲ್ಲಾಹನು ಇಡೀ ಮಾನವಕುಲಕ್ಕೆ ಸಂಕೇತವಾಗಿ ಅತಿರೇಕದ ವರ್ತನೆಯ ಆ ಫೇರೋವನ ದೇಹವನ್ನು ಉಳಿಸಿದ್ದಾನೆ.

ಮುಹಮ್ಮದ್ (ಸ) ಅವರಿಗೆ ಇತಿಹಾಸ ತಿಳಿದಿತ್ತು ಮತ್ತು ಅದನ್ನು ಕುರ್‌ಆನಿನಲ್ಲಿ ಬರೆದಿದ್ದಾರೆ ಎಂದು ಹೇಳುವವರಿಗೆ, ಈ ಕೆಳಗಿನ ವಿಷಯವು ಇಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಕ್ರಿ.ಶ. 615 ರಲ್ಲಿ, ರೋಮನ್ ಸೈನ್ಯವು ಪರ್ಷಿಯನ್ನರಿಂದ ಸೋಲಿಸಲ್ಪಟ್ಟಿತು. ಈ ಘಟನೆಯ ಬಗ್ಗೆ ದೇವನು ಹೀಗೆ ಬಹಿರಂಗಪಡಿಸಿದನು: “ರೋಮನರು ಪರಾಜಿತರಾದರು. ಅತ್ಯಂತ ಕೆಳಮಟ್ಟದ ಭೂಭಾಗದಲ್ಲಿ, ಮತ್ತು ತಮ್ಮ ಈ ಪರಾಜಯದ ತರುವಾಯ ಅವರು ವಿಜಯಿಗಳಾಗುವರು. ಕೆಲವೇ ವರ್ಷಗಳಲ್ಲಿ, ಹಿಂದೆಯೂ ಇನ್ನು ಮುಂದೆಯೂ ಅಲ್ಲಾಹನದೇ ಪ್ರಭುತ್ವವಿದೆ. (30: 2-4)

7 ವರ್ಷಗಳ ನಂತರ ಕ್ರಿ.ಶ. 622 ರಲ್ಲಿ ಪರ್ಷಿಯನ್ನರು ಸೋಲಿಸಲ್ಪಟ್ಟಿದ್ದರಿಂದ ಅಲ್ಲಾಹನ ಮಾತುಗಳು ನಿಜವೆಂದು ಸಾಬೀತಾಯಿತು. ರೋಮನ್ನರು ಜಯಶಾಲಿಯಾಗುತ್ತಾರೆ ಎಂದು ಮುಹಮ್ಮದ್ (ಸ) ಅವರಿಗೆ ತಿಳಿಯಲು ಯಾವುದೇ ಸಾಧ್ಯತೆ ಇರಲಿಲ್ಲ. ವಾಸ್ತವವಾಗಿ, ಯುದ್ಧ ನಡೆದ ‘ಅತ್ಯಂತ ಕೆಳಮಟ್ಟದ ಭೂಮಿ’ ಅಕ್ಷರಶಃ ಅದೇ ಆಗಿತ್ತು ಎಂಬುದು ಅವರಿಗೆ ತಿಳಿದಿರಲಿಲ್ಲ. ಕ್ರಿ.ಶ. 615 ರ ಯುದ್ಧವು ಮೃತ ಸಮುದ್ರದ (ಡೆಡ್ ಸೀ) ತೀರದಲ್ಲಿ ನಡೆದಿತ್ತು. ಇದು ಭೂಮಿಯ ಮೇಲಿನ ಸಮುದ್ರ ಮಟ್ಟಕ್ಕಿಂತ ಅತ್ಯಂತ ಕೆಳಮಟ್ಟದ ಬಿಂದುವಾಗಿದ್ದು, 1300 ಅಡಿ ಕೆಳಗಿದೆ.

ಈ ಅರ್ಹತೆಗಳನ್ನು ಹೊಂದಿರುವ ಗ್ರಂಥವು ಆಕಾಶಗಳು ಮತ್ತು ಭೂಮಿಯ ಸೃಷ್ಟಿಕರ್ತನಿಂದ ಮಾತ್ರ ಬರಲು ಸಾಧ್ಯ. ಈ ಗ್ರಂಥವನ್ನು ನಾವು ಅರಿಯಬೇಕಿದೆ. ಅಲ್ಲಾಹನು ಹೇಳುತ್ತಾನೆ: “ಓ ಮುಹಮ್ಮದರೇ, ಇದೊಂದು ಗ್ರಂಥ. ನೀವು ಜನರನ್ನು ಅವರ ಪ್ರಭುವಿನ ಅನುಜ್ಞೆಯಂತೆ ಅಂಧಕಾರಗಳಿಂದ ಹೊರತೆಗೆದು ಪ್ರಕಾಶದ ಕಡೆಗೆ ತರಲಿಕ್ಕಾಗಿ ನಾವು ಇದನ್ನು ನಿಮಗೆ ಅವತೀರ್ಣಗೊಳಿಸಿರುತ್ತೇವೆ. ಅವನು ಮಹಾ ಪ್ರತಾಪಿಯೂ ಸ್ವಯಂ ಸ್ತುತ್ಯರ್ಹನೂ ಆಗಿರುತ್ತಾನೆ.” (14:1)

ಕೃಪೆ: islamonline.net

ಕನ್ನಡಾನುವಾದ: ಅಬೂ ಹುದೈಫಾ

Leave a Reply